ಆದರೆ ಇತ್ತೀಚೆಗೆ ರೋಗಿಗಳನ್ನು ಗುಣಪಡಿಸುವ ಹೆಸರಿನಲ್ಲಿ ಅನಗತ್ಯ ಪರೀಕ್ಶೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾಡಿ, ಬೇಡದ ಮದ್ದು ನೀಡಿ ಅಮಾಯಕ ರೋಗಿಗಳಿಂದ ಹಣ ಸುಲಿಗೆ ಮಾಡುವ ವೈದ್ಯರು ಹಾಗೂ ಆಸ್ಪತ್ರೆಗಳೇ ಹೆಚ್ಚಾಗುತ್ತಿವೆ. ಕಡಿಮೆ ಬೆಲೆಯ ಮದ್ದನ್ನು ರೋಗಿಗಳಿಗೆ ನೀಡುವ ಬದಲು ಹಣದ ಆಸೆಗೆ ಖಾಸಗೀ ಮದ್ದು ತಯಾರಿಕಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ್ ವೈದ್ಯರು ಆ ಕಂಪನಿಯ ಮಾತ್ರೆಗಳನ್ನೇ ತೆಗೆದುಕೊಳ್ಳುವಂತೆ ಹೇಳುತ್ತಾರೆ.ಇದರಂತೆಯೇ ತಾವು ಹೇಳಿದ ಸ್ಥಳದಲ್ಲಿಯೇ ವಿವಿಧ ವೈದ್ಯಕೀಯ ಪರೀಕ್ಶೆಗಳನ್ನು ಮಾಡಿಸಿಕೊಳ್ಳುವಂತೆ ರೋಗಿಹಳಿಗೆ ಸೂಚನೆ ನೀಡುತ್ತಾರೆ. ಅನಗತ್ಯವಾಗಿದ್ದರೂ ಶಸ್ತ್ರಚಿಕಿತ್ಸೆ ಮಾಡುವುದು, ಐಸಿಯುವಿನಲ್ಲಿ ಬೇಡದಿದ್ದರೂ ವಾರಗಟ್ಟಲೇ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದು ಇತ್ಯಾದಿ ಹತ್ತು ಹಲವು ರೀತಿಯಲ್ಲಿ ಜನರಿಂದ ಹಣ ವಸೂಲಿ ಮಾಡಲಾಗುತ್ತದೆ.
ಖಾಸಗೀ ಆಸ್ಪತ್ರೆಗಳದ್ದು ಈ ಗತಿಯಾದರೆ ಸರ್ಕಾರಿ ಆಸ್ಪತ್ರೆಗಳದ್ದು ಇನ್ನೊಂದು ಗೋಳು. ಗ್ರಾಮೀಣ ಭಾಗಕ್ಕೆ ಹೋಗಲು ಹೆಚ್ಚಿನ ವೈದ್ಯರು ಮುಂದೆ ಬರುವುದಿಲ್ಲ.ಹೀಗಾಗಿಯೇ ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದನ್ನು ಕಡ್ಡಾಯ ಮಾಡುವ್ಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಅಕಸ್ಮಾತ್ ವೈದ್ಯರು ಇದ್ದ್ರೂ ರೋಗಿಯನ್ನು ಉಪಚರಿಸಲು ಮೂಲಭೂತ ಸೌಕರ್ಯ, ಸಲಕರಣೆ ಹಾಗೂ ಮದ್ದಿನ ಅಭಾವವಿರುತ್ತದೆ. ಹೀಗಾಗಿ ರೋಗಿಗಳು ಬೇರೆ ಊರುಗಳಿಗೆ, ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿ. ಇದನ್ನು ಭರಿಸಲಾಗದ ಸಾಮಾನ್ಯರು ಸೂಕ್ತ ಚಿಕಿತ್ಸೆಯಿಲ್ಲದೇ ಜೀವದ ಬೆಲೆ ತೆರುತ್ತಿರುವುದು ಖೇದಕರ.
ಎಲ್ಲಾ ಸರ್ಕಾರಿ ಹಾಗೂ ಆಸ್ಪತ್ರೆಗಳು ಕೆಟ್ಟದಾಗಿವೆಯೆಂದು ನಾನು ಹೇಳುತ್ತಿಲ್ಲ. ಕೆಲವೊಂದು ಆಸ್ಪತ್ರೆಗಳು ಅತ್ಯುನ್ನತ ಗುಣಮಟ್ಟದ ಸೇವೆಯನ್ನು ನೀಡುತ್ತಿವೆ. ಆದರೆ ಇಂತಹ ಆಸ್ಪತ್ರೆಗಳ ಸಂಖ್ಯೆ ಬಹಳ ಕಡಿಮೆ.
ದೇವರಿಗೆ ಸಮವೆಂದು ಭಾವಿಸುವ ವೈದ್ಯರೇ ಯಮರೂಪಿಯಾಗಿ ಕಾಡಿದರೆ ಸಾಮಾನ್ಯರು ಎಲ್ಲಿಗೆ ಹೋಗಬೇಕು? ವೈದ್ಯಕೀಯವು ಹಣ ಮಾಡುವ ದಂಧೆಯಗಿ ಮಾರ್ಪಾಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಈ ಅವ್ಯವಸ್ಥೆಗೆ ನಾವು ಬರೀ ವೈದ್ಯವಲಯವನ್ನು ಸಂಪೂರ್ಣ ದೂರಿದರೆ ತಪ್ಪಾಗುತ್ತದೆ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಪೂರ್ಣಗೊಳಿಸಲು ಸುಮಾರು ಆರು ವರ್ಶಗಳು ಬೇಕು. ಈಗ ಬರೀ ಎಂಬಿಬಿಎಸ್ ಮಾಡಿದರೆ ಸಾಲುವುದಿಲ್ಲ ಅದರ ಜೊತೆಗೆ ಸ್ನಾತಕೋತ್ತರ ಪದವಿ ಮಾಡಲೇ ಬೇಕು ಭಾರತದಲ್ಲಿರುವ ಸಾವಿರಾರು ಎಂಬಿಬಿಎಸ್ ಸೀಟುಗಳಿಗೆ ಕೇವಲ ಹಲವು ನೂರು ಸ್ನಾತಕೋತ್ತರ ಸೀಟುಗಳು ಮಾತ್ರ ಲಭ್ಯವಿದೆ. ಆದ್ದರಿಂದ ಈ ಸೀಟುಗಳಿಗೆ ಸ್ಪರ್ಧೆ ಬಹಳವಿರುತ್ತದೆ. ಅಕಸ್ಮಾತ್ ಸೀಟು ಸಿಕ್ಕರೂ ಓದಿಸುವ ತಾಕತ್ತು ಮನೆಯವರಿಗಿರಬೇಕು ಇಲ್ಲಾ ಸಾಲ ಮಾಡಬೇಕು. ಅದಿಲ್ಲವಾದರೆ ಕೋಟ್ಯಾಂತರ ರೂ ಖರ್ಚು ಮಾಡಿ ಮ್ಯಾನೇಜ್.ಮೆಂಟ್ ಸೀಟು ಪಡೆಯಬೇಕು ಅಥವಾ ವಿದೇಶಕ್ಕೆ ಹಾರಬೇಕು. ಇದಾವುದೂ ಮಾಡಲಾಗದೇ ಬೇರೆ ಕೆಲಸವೂ ಸಿಗದೇ ಮನೆಯಲ್ಲಿ ಕುಳಿತಿರುವ ಸಾವಿರಾರು ಎಂಬಿಬಿಎಸ್ ಪದವೀಧರರು ಮನೆ ಮನೆಯಲ್ಲಿ ನಮಗೆ ಸಿಗುತ್ತಾರೆ.
ಇಶ್ಟೆಲ್ಲಾ ಮಾಡಿಯೂ ಕೊನೆಗೆ ಇವರಿಗೆ ಸಿಗುವ ಸಂಬಳ ಈಗಿನ ಸಾಫ್ಟ್.ವೇರ್ ಇಂಜಿನೀಯರುಗಳು ಅಥವಾ ಸಾಮಾನ್ಯ ಪದವೀಧರರು ಪಡೆಯುವ ಸಂಬಳಕ್ಕಿಂತ ಕಡಿಮೆ. ಹೀಗಾಗಿ ಅವರು ಖಾಸಗೀ ಆಸ್ಪತ್ರೆಗಳ ಕಡೆಗೆ ಮುಖಮಾಡುತ್ತಾರೆ ಅಥವಾ ಬೇರೆ ರೀತಿಯಲ್ಲಿ ಹಣಮಾಡುವ ಯೋಜನೆಗೆ ಕೈ ಹಾಕುತ್ತಾರೆ.
ಒಬ್ಬ ವಿದ್ಯಾರ್ಥಿ ವೈದ್ಯನಾಗಬೇಕಾದರೆ ಕನಿಶ್ಟ 10 ವರ್ಶವಾದರೂ ಬೇಕು ಆ ಸಮಯದಲ್ಲಿ ಅವರ ಓರಗೆಯವರು ಬೇರೆ ಪದವಿಗಳನ್ನು ಪಡೆದು ಜೀವನದಲ್ಲಿ ನೆಲೆಗೊಂಡಿರುತ್ತಾರೆ. ಇವರು ಆಗಿನ್ನೂ ದುಡಿಯಲು ಆರಂಭಿಸಿರುತ್ತಾರೆ. ಓದಿಗಾಗಿ ಮಾಡಿದ ಸಾಲವನ್ನು ತೀರಿಸುವ ಬಗೆಯಾದರೂ ಹೇಗೆ? ತಮ್ಮ ಜೀವನ ರೂಪಿಸಿಕೊಳ್ಳುವುದು ಯಾವಾಗ? ಇದಕ್ಕೆ ಉತ್ತರವಿಲ್ಲ.
ಈ ಎಲ್ಲಾ ಸಮಸ್ಯೆಗಳಿಗೂ ಅಂತ್ಯ ಹಾಡುವುದು ಹೇಗೆ? ನಾವು ವೈದ್ಯೋ ನಾರಾಯಣೋ ಹರಿಃ ಎಂಬುದು ಸರಿ ಆದರೆ ಅವರನ್ನು ಕಾಪಾಡುವುದು ಯಾರು ರೀ? ವೈದ್ಯವಲಯ ಹಾಗೂ ರೋಗಿಗಳು ಇವರಿಬ್ಬರಿಗೂಅನ್ಯಾಯವಾಗದಂತೆ ತಡೆಯುವುದು ಹೇಗೆ?ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.